ಒಬ್ಬನೇ ವ್ಯಕ್ತಿ ತನ್ನ ಸತತ ಸಾಧನೆಗಳ ಮೂಲಕ ಎಷ್ಟೆಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬಲ್ಲ ಎನ್ನುವುದಕ್ಕೊಂದು ಉತ್ತಮ ಉದಾಹರಣೆಯಾದ ಸತೀಶ್ ಆನಂದ ಶೆಟ್ಟಿಯವರು ಉಡುಪಿಯ ಹಿರಿಯಡ್ಕ ಪೆರ್ಣಂಕಿಲ ಪಡುಬೆಟ್ಟು ಆನಂದ ಮದನ್ ಶೆಟ್ಟಿ ಹಾಗೂ ಉಡುಪಿ ಜಿಲ್ಲೆಯ ಮಂದಾರ್ತಿ ಹೆಗ್ಗುಂಜೆ ಹೆಬ್ಬಾಡಿ ಪಾರ್ವತಿ ಆನಂದ ಶೆಟ್ಟಿ ದಂಪತಿಯರ ಸುಪುತ್ರರಾಗಿ ಜನಿಸಿದರು. ಸತೀಶ್ ವಾಣಿಜ್ಯ ಪದವಿಧರರು ಹಾಗೂ ಎಂ.ಬಿ.ಎ ಸ್ನಾತಕೋತ್ತರ ಉಚ್ಛ ಶಿಕ್ಷಣ ಪಡೆದ ಧೀಮಂತರು. ಇವರು ಬಹುಭಾಷಾ ಜ್ಞಾನಿ ಅಷ್ಟೇ ಅಲ್ಲದೆ ಹಲವಾರು ಕ್ರೀಡೆಗಳ ಅಭ್ಯಾಸ ಮಾಡಿದ ಕ್ರೀಡಾಪಟು ಕೂಡಾ.

ಸಾಮಾಜಿಕ ಚಿಂತನೆ ಉಳ್ಳವರಾದ ಸತೀಶ್ ಶೆಟ್ಟಿಯವರು ಬಡ ಮಕ್ಕಳ ಶಿಕ್ಷಣಕ್ಕೆ ಬೇಕು ಬೇಕಾದ ಪಠ್ಯ ಪುಸ್ತಕ ಹಾಗೂ ಇತರ ವಸ್ತುಗಳನ್ನು ಕೊಡಮಾಡುತ್ತಾ ಬಂದವರು. ಬಡಬಗ್ಗರ ಕುರಿತು ಕರುಣೆ ತೋರುತ್ತಾ ತನ್ನ ಕೈಲಾದ ಸಹಾಯ ಮಾಡುವವರು. ಸಮಾಜಕ್ಕೆ ತೀರಾ ಅವಶ್ಯಕ ಉತ್ಪನ್ನ ಹಾಗೂ ಸೇವೆಗಳನ್ನು ನೀಡಬಹುದಾದ ಕೆಲವು ಕಿರು ಕೈಗಾರಿಕೆಗಳನ್ನು ಹುಟ್ಟು ಹಾಕಿ ಓರ್ವ ಕೈಗಾರಿಕೋದ್ಯಮಿಯಾಗಿಯೂ ಗುರುತಿಸಿ ಕೊಂಡಿದ್ದು, ಸಮಾಜ ಸೇವಾ ಭಾವನೆಯಿಂದ ತನ್ನ ಮಾತೃಶ್ರೀ ಅವರ ಹೆಸರಿನಲ್ಲಿ ಹುಟ್ಟು ಹಾಕಿದ ಶ್ರೀಮತಿ ಪಾರ್ವತಿ ತಾಯಿ ಚಾರಿಟೇಬಲ್ ಟ್ರಸ್ಟ್ ಇದರ ಛೇರ್ಮನ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ತಲೋಜ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ತನ್ನ ವೈವಿಧ್ಯಮಯ ಸೇವಾ ಕಾರ್ಯಗಳಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದವರಿದ್ದಾರೆ. ಸಾರ್ವಜನಿಕ ಸಂಪರ್ಕ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿಯೂ ಡಿಪ್ಲೊಮಾಗಳನ್ನು ಪಡೆದಿರುವುದರ ಜೊತೆಗೆ ತನ್ನ ಉದ್ಯಮ ಸಂಬಂಧಿ ವಿಶೇಷ ಹಾಗೂ ಆಳ ಅಧ್ಯಯನ ನಿರತರಾಗಿದ್ದಾರೆ.
